ಯಾದಗಿರಿ ಜೂ 14:- ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದರು.
ಅವರಿಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆರೋಗ್ಯ ಅವಿಷ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಎಸ್ ಎಲ್ ಸಿ ಫಲಿತಾಂಶದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಇದ್ದೇವೆ.
ಖಾಲಿ ಇರುವ ಶಿಕ್ಷಕರ ಹುದ್ದೆ ತಕ್ಷಣವೇ ಭರ್ತಿ ಮಾಡಿಕೊಳ್ಳಬೇಕು. ಯಾವುದೇ ಗೊಂದಲಗಳಿಲ್ಲದೆ ಯಾರು ನ್ಯಾಯಾಲಕ್ಕೆ ಹೋಗದಂತೆ ನಿಯಮಾನುಸಾರ ಮಾಡಬೇಕು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುದ್ದೆ ತುಂಬಲು ಯಾವುದೇ ಆರ್ಥಿಕ ಬೆಂಬಲ ಅಗತ್ಯವಿಲ್ಲ. ಈ ಭಾಗದಲ್ಲಿ ಅನುದಾನದ ವ್ಯವಸ್ಥೆ ಇದೆ.ಈ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಹುದ್ದೆ ಭರ್ತಿ ಮಾಡದಿದ್ದರೆ, ಈ ಭಾಗದ ಮಕ್ಕಳು ಬೀದಿ ಪಾಲಾಗುತ್ತಾರೆ.
ಬೆಂಗಳೂರನ್ನು ನೀವು ಸಿಂಗಾಪುರಾದರು ಮಾಡಿ, ಮತ್ತೇನಾದರೂ ಮಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗವನ್ನು ಸಿಂಗಾಪುರ ಮಾಡುವ ಅಗತ್ಯವಿಲ್ಲ. ನಮ್ಮನ್ನು ಬೆಂಗಳೂರು, ಮೈಸೂರನ್ನಾಗಿ ಮಾಡಿ. ಬ್ಯಾಕ್ ಲಾಕ್ ಬರ್ತಿದೆ ಹುದ್ದೆ ಮೀಸಲಿಟ್ಟು, ಉಳಿದ ಸ್ಥಾನ ತುಂಬದಿದ್ದರೆ ನಮ್ಮ ಮಕ್ಕಳ ವಿದ್ಯಾರ್ಜನೆ ಇನ್ನು ಕುಸಿಯುತ್ತದೆ.
ಕಲ್ಯಾಣ ಕರ್ನಾಟಕ ಆರೋಗ್ಯ ಆವಿಷ್ಕಾರ ಕಾರ್ಯಕ್ರಮಕ್ಕೆ 440 ಕೋಟಿ ರೂ ಅನುದಾನ ನೀಡುವ ಮೂಲಕ ಭಾಗದ ಜನರ ಆರೋಗ್ಯ ಭದ್ರತೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.ರಾಜ್ಯ ಸರ್ಕಾರ ನೀಡುವ ಅನುದಾನ ಅತ್ಯಂತ ಸಮರ್ಪಕ ಮತ್ತು ಕಾಲಮಿತಿಯಲ್ಲಿ ಬಳಸುವ ಕಾರ್ಯ ಕ್ಷಮತೆ ಹೊಂದಬೇಕು ಎಂದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಡಾ. ಶರಣ್ ಪ್ರಕಾಶ್ ಪಾಟೀಲ್, ಎನ್ಎಸ್ ಬೋಸರಾಜು, ಈಶ್ವರ್ ಕಂಡ್ರೆ, ಸಂಸದರಾದ ಜಿ.ಕುಮಾರ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.